ಅನ್ವರ್ ಉಸ್ತಾದ್
ಕಾಸರಗೋಡಿನ ಆರಿಕ್ಕಾಡಿ ಎಂಬಲ್ಲಿ ಸ್ನೇಹಿತನ ಮದುವೆಗೆ ಹೋಗಿದ್ದೆ. ಅಲ್ಲಿಂದ ಮರಳುವಾಗ ಶೈಖುನಾ ತಾಜುಶ್ಶರೀಅಃ ಅಲಿ ಕುಂಞಿ ಉಸ್ತಾದರ ಮಖಾಂ ಝಿಯಾರತ್ ಮಾಡಲು ಹೋದೆ. ಪ್ರವಾದಿ ﷺ ರನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಮಹಾನ್ ವ್ಯಕ್ತಿ. ಪ್ರವಾದಿ ﷺ ರು ಹೇಳಿಕೊಟ್ಟ ಅದೇ ರೂಪದಲ್ಲಿರುವ ಜೀವನ ಶೈಲಿ. ಉಸ್ತಾದರ ಜೀವಂತಕಾಲದಲ್ಲಿ ಉಸ್ತಾದರನ್ನು ನೇರ ಕಂಡು ಆಶೀರ್ವಾದ ಪಡೆಯಲು ಭಾಗ್ಯ ಲಭಿಸಿದೆ ಅಲ್ ಹಂದು ಲಿಲ್ಲಾಹ್. ಉಸ್ತಾದರ ಬಳಿ ನಿಂತು ಫಾತಿಹಾ ಸೂರತ್ ಓದಿ ಪ್ರಾರ್ಥಿಸಿದಾಗ ಮನಸ್ಸಿಗೆ ಎಲ್ಲಿಲ್ಲದ ಸಮಾಧಾನ.
ಅಲ್ಲಿ ಝಿಯಾರತ್ ಮುಗಿಸಿ ಕೂಡಲೇ ಅಲಿ ಕುಂಞಿ ಉಸ್ತಾದರ ಸುಪುತ್ರ ಅನ್ವರ್ ಅಲಿ ಸಖಾಫಿ ಉಸ್ತಾರಿಗೆ ಫೋನ್ ಮಾಡಿದೆ. ಜಾಮಿಯಾ ಸಅದಿಯಾ ಅರಬಿಯಾ ಹಿಫ್ಝುಲ್ ಖುರ್ಆನ್ ಕಾಲೇಜಿನಲ್ಲಿ ಉಸ್ತಾದರ ಶಿಷ್ಯನಾಗಲು ಭಾಗ್ಯ ಲಭಿಸಿತ್ತು. ಉಸ್ತಾದರನ್ನು ಮಾತನಾಡಿಸಲು ಪಕ್ಕದಲ್ಲೇ ಇದ್ದ ಲತೀಫಿಯ ಸ್ಥಾಪನೆಗೆ ಹೊರಟೆ. (ಅನ್ವರ್ ಉಸ್ತಾದ್ ಈಗ ಅಲ್ಲಿ ಸೇವೆ ಸಲ್ಲಿಸುವುದು) ಉಸ್ತಾದರನ್ನು ಕಂಡು ಮಾತನಾಡಿಸಿದಾಗ ತುಂಬಾ ಸಂತೋಷವಾಯಿತು. ಹೆಗಲಿಗೆ ಕೈ ಹಾಕಿ ಸ್ನೇಹಿತನ ಹಾಗೆ ಮಾತನಾಡಿಸಿದರು. ಅಲ್ಲಿಂದ ನೇರ ಉಸ್ತಾದರ ಮನೆಗೆ ಕರೆದುಕೊಂಡು ಹೋಗಿ ಕಾಫಿ ಕುಡಿಸಿದರು. ತುಂಬಾ ವಿಶೇಷಗಳು ಕೇಳಿ ಪ್ರಾರ್ಥಿಸಿ ಕೊಟ್ಟರು.
ನಮಗೆ ವಿದ್ಯೆ ಕಲಿಸಿದ ಗುರುಗಳನ್ನು ಕಲಿಕೆಯ ನಂತರ ಮತ್ತೊಮ್ಮೆ ನೇರ ಕಂಡು ಮಾತನಾಡಿಸುವಾಗ ಏನೋ...ಎಲ್ಲಿಲ್ಲದ ಸಂತೋಷ. ಒಂದನೇ ತರಗತಿಯಿಂದ ಹಿಡಿದು ಡಿಗ್ರೀ ತನಕ ಕಲಿಸಿದ ನಮ್ಮ ಗುರುವರ್ಯರನ್ನು ಮನಸ್ಸರಿತು ಪ್ರೀತಿಸಬೇಕು. ಅವರ ಆಶೀರ್ವಾದದಿಂದಲೇ ಜೀವಿಸಬೇಕು. ನಮ್ಮೆಲ್ಲರ ಉಸ್ತಾದರುಗಳಿಗೆ, ಶಿಕ್ಷಕ ಶಿಕ್ಷಕಿಯರಿಗೆ ಅಲ್ಲಾಹು ಒಳಿತು ನೀಡಲಿ - ಆಮೀನ್
Comments
Post a Comment